Saturday, November 29, 2008

ನದಿ ಮತ್ತು ನೆನಪು





ಜಿಟಿ ಜಿಟಿ ಮಳೆ

ರಸ್ತೆಯೆಲ್ಲಾ ಕೆಸರು ಕೊಚ್ಚೆ

ಮನಸ್ಸೆಲ್ಲಾ ರಾಡಿ

ಯರೋ ಹೇಳಿದ ನೆನಪು

ನದಿಗೆ ನೆನಪಿನ

ಹಂಗಿಲ್ಲವಂತೆ

ಮಳೆಗಾಲದಲ್ಲಿ ತುಂಬಿದ

ಹರಿವು ನದಿಗೆ

ನೋವು ನಲಿವೆಲ್ಲಾ ಒಂದೇ



ಸೆಳೆವಲ್ಲಿ ಕೊಚ್ಚಿ ಹೋದ

ಕನಸುಗಳು ಇನ್ನೂ

ಕನಸುಗಳಾಗಿಯೇ ಉಳಿದಿವೆ



ಸುಳಿಗೆ ಸಿಕ್ಕಿ ಮುಳುಗಿದ

ಮನಸುಗಳು

ಯಾರ ಲೆಕ್ಕಕ್ಕೂ ಸಿಕ್ಕಿಲ್ಲ



ನೆನಹುಗಳಿಂದ ತೊಯ್ದ

ತಟಗಳಲ್ಲಿ ಇನ್ನೂ

ಯರೋ ಕುಳಿತಿರುವಂತೆ..




ನಿಜ, ನದಿಗೆ ನೆನಪಿನ

ಹಂಗಿಲ್ಲ, ಆದರೆ;

ನನಗೂ ನಿನಗೂ ಇದೆ.



ಕಡಲ ಸೇರಿ ಸಿಹಿ ನೀರು

ಉಪ್ಪದಾರೂ, ಮುಪ್ಪಾದರೂ

ನೆನಪು ಚಿರಂಜೀವಿ



ನೆನೆವ ಮನದಲ್ಲಿ

ಮುಚ್ಚಿದ ರೆಪ್ಪೆಗಳೆಡೆಯಲ್ಲಿ

ನದಿ ಹರಿಯುತ್ತಲೇ ಇದೆ.



ನದಿಗೆ ನೆನಪಿನ ಹಂಗಿಲ್ಲ, ನಿಜ

ಆದರೆ...



Wednesday, November 5, 2008

ಜೀವ ರಸಾಯನ ಶಾಸ್ತ್ರ ವಿಭಾಗದಿಂದ


ಊರಿಂದ ದೂರ, ಬೆಟ್ಟದ ಮೇಲೆ

ನಮ್ಮ ಜೀವ ರಸಾಯನ ಶಾಸ್ತ್ರ ವಿಭಾಗ

ಬುಡವಿಲ್ಲ, ತುದಿಯಿಲ್ಲ

ಕಟ್ಟಿದ್ದು ಯಾರೋ ಸರಿಯಾಗಿ ಗೊತ್ತಿಲ್ಲ!


ಪ್ರಯೋಗ ಶಾಲೆಯ ಮುಲೆ ಮುಲೆಗಳೊಳಗೆ

ಸಹಬಾಳ್ವೆ ನಡೆಸುತ್ತಿರುವ

ಹಳೆಯ ಶತಮಾನಗಳಿನ್ನೂ

ಉಸಿರಾಡುತ್ತಿವೆ


ಒಮ್ಮೆ ಹೊಕ್ಕಿರೆಂದರೆ

ಆ ಸರಳುಗಳಿನಂದಾಚೆ

ಹೊಸತೊಂದು ಆಯಾಮ

ಅನಾವರಣಗೊಳ್ಳುವ ಬದುಕು

ನಿಜಕ್ಕೂ ವಾಸ್ತವವೊಂದು ಒಗಟು


ಎಲ್ಲೋ ಕಾಡಲ್ಲಿ

ಬಂಡೆಗಳ ಮೇಲೆ ಬೆಳೆದ

ಬಾನ್ಸಾಯಿಗಳೆಲ್ಲಾ

ಇಲ್ಲಿ ತಳವೂರಿ ಹೆಮ್ಮರಗಳಾಗಿ

ಆಗಸಕೆ ಚಾಚಿವೆ.


ಅವರಂತಾಗುವ ಆಸೆ ನಮಗೂ

ಆದರೆ, ಅಪರಿಚತೆಯ

ನೀರವ ಮೌನ ಕೆಣಕುತ್ತದೆ

ಅರಿಯದಕ್ಕೆ ಅಂಜುವುದೇ

ಮಾನವ ಗುಣ


ಎಷ್ಟು ಅಂಕು ಡೊಂಕಾಗಿ

ದಾರಿ ತಪ್ಪಿಸಿ ನಡೆದರೂ

ಬೆನ್ನಟ್ಟುತ್ತದೆ

ಕಣ್ಣಿನಂಚಿಂದಲೇ

ಕೆಣಕುತ್ತದೆ

ಮನದ ತಿಳಿಕೊಳವನ್ನು

ಕದಡುತ್ತದೆ.


ಇನ್ನು ಮೇಲಲ್ಲಿಗೆ

ಹೊಗುವುದೇ ಇಲ್ಲವೆಂದುಷ್ಟೋ ಬಾರಿ

ಅಂದುಕೊಳ್ಳುತ್ತೇನೆ


ಆದರೇನು?!


ಭಯವ ಗೆಲ್ಲುವ ತವಕ

ಅಂಜಿಕೆಯನ್ನೇರಿ ಸಾಗುತ್ತದೆ

ಅದ ಗೆದ್ದಾಗಲೇ ಸತ್ಯದ

ಹೊಸತೊಂದು ಮಜಲು

ಕಾಣುತ್ತದೆ


ಮಸುಕಾದ ಹಾದಿಯಲ್ಲಿ

ಜಾರಿದಾಗ ಬೀಳದಂತೆ

ಹಿಡಿಡೆತ್ತಲುಎಷ್ಟೊಂದು ಕೈಗಳು


ನಗುವ ಹೂಗಳು

ಹಾಡುವ ಗೀತೆಯ ನಾದಕ್ಕೆ

ನಾವೂ ಅರಳಬೇಕು

ಮುಂದೆ ಅವರ ಜಾಗಕ್ಕೆ ನಾವೂ

ನಮ್ಮ ಜಾಗಕ್ಕೆ ಇನ್ಯಾರೋ....

ಬದುಕು ಹಿಗೇ ಸಾಗಬೇಕು.

Saturday, October 18, 2008

ಹಾಡು ಹಕ್ಕಿ

ಇಂದೇಕೆ ಮೌನ ಹಾಡು ಹಕ್ಕಿ
ಮರೆತೆಯೇನು ಹಾಡನು?!
ಭಾವ ತುಂಬಿ ಬರೆದ ಕವಿಯ
ಎದೆಯ ಮಿಡಿತದ ಸಾಲನು

ನಿನ್ನ ದಿವ್ಯ ಮೌನದೊಡನೆ
ಮರೆಯಾಯ್ತು ಎಲ್ಲಾ ರಾಗವು
ಮುಡದಾಯಿತು ಕವಿತೆಯು
ನಾದವಿರದ ಅನಾಥ ಜಗವು
ನಿನ್ನ ದನಿಗೆ ಕಾದಿದೆ

ಬಿಟ್ಟು ಬಾರೆ ಭಯದ ಗೂಡ
ರೆಕ್ಕೆ ಬಿಚ್ಚಿ ಹಾರು ಬಾ
ಸಹ್ಯಾದ್ರಿ ಸಾಲ ಹಸಿರಿನಲ್ಲಿ
ನಿನ್ನ ಉಸಿರ ಸೇರಿಸಿ
ಏರಿಳಿತದ ಪ್ರಕೃತಿಗೊಂದು
ರಾಗಹಚ್ಚಿ ಹಾಡು ಬಾ

ಅಭಿಮಾನಿ ಹೃದಯ ನಿನಗೆ
ಹಲವು ಕಾತರದಿ ಕಾದಿವೆ
ಕರುಣೆ ತೋರಿ ಬರಡು ಮನಕೆ
ಗಾನಸುಧೆಯ ಹರಿಸು ಬಾ
ನಮಗಾಗಿ ಒಮ್ಮೆ ಹಾಡು ಬಾ.

Saturday, October 4, 2008

ಸಂಕೋಲೆ



ಭಾವನೆಗಳ ಗರಿಗೆದರಿ

ಮುಕ್ತತೆಯ ಮತ್ತೇರಿ

ಕನಸಿನ ಬೆನ್ನೇರಿ

ಹಾರಲು ಸಿದ್ದ


ಮತ್ತೇನೋ ಸೆಳೆತ

ನೆನಪಿನ ಬೇರು

ಭೂಮಿಗೆ ಬಂದಿತ

ಕರ್ತವ್ಯಕೆ ಅಂಜುವೆಯೇಕೆ?


ಏಕಾಂತವು ತೇಲುವ ಮೇಘ

ದು:ಖವು ಕರಗುವ ಆವಿ

ಮಿಂಚಿ ಗುಡುಗುವ ಬುದ್ದಿ

ಕಣ್ಣೀರ ಹನಿಮಳೆ

ಕಡಲ ಸೇರುವ ದಿನವೆಂದೋ?!


ಸ್ವಾತಂತ್ರ್ಯ ಮಾರುತದಿ

ತೇಲುವ ಮನ, ತಡೆ ಅರೆ ಕ್ಷಣ

ಮಣ್ಣಿನ ವಾಸನೆಯ ಮರೆಯುವುದೆಂತು?


ಪ್ರೀತಿ, ವಾತ್ಸಲ್ಯ,ಬಾಂದವ್ಯ,ಜವಾಬ್ದಾರಿ, ವಿಶ್ವಾಸ

ಬಾವನೆಗಳೇ ಕೊಂಡಿಗಳು

ಹುಚ್ಚು ಮನಸ್ಸಿಗೆ ತೊಡರುವ ಸಂಕೋಲೆಗೆ.

Saturday, August 16, 2008

ಊರ್ಧ್ವಮುಖಿ

ಭುವಿಯನ್ನೂ ಬಾನನ್ನೂ
ಬೆಸೆಯುವಂತೆ
ಬಯಲಲೊಂದು
ಒಂಟಿ ಮರ.

ಟಿಸಿಲೊಡೆದ ಒಣ ರೆಂಬೆಗಳು
ಮೋಡದೊಳಗೇ ಇಳಿದು
ನೀರ ಹೀರುತಿವೆಯೆನೋ
ಭೂಮಿ ಭರಡಾದರೆ
ಇನ್ನೇನು ಮಾಡೀತು ಪಾಪ! !

ನೆಲದೊಳಗಿನ ಬೇರು
ಗತಕಾಲವನ್ನೆಲ್ಲಾ
ತಡವಿ, ಎಡವಿ
ಒಳಗಿನ ಲವಾರಸಕ್ಕೆ
ಕರಟಿ ಹೋಗಿದೆ

ನೀರ ಅರಸುವ ಭರದಲ್ಲಿ,
ಮಣ್ಣ ಹೆಂಟೆಯ ಒಳಗಿನ
ಬೆಂಕಿಯ ಭಯದಲ್ಲಿ,
ಬೇರ ಮರೆತೇ ಬಿಟ್ಟಿದೆ.

ಜನರೂ ಅಷ್ಟೇ
ಅದ ಕಂಡಾಗೆಲ್ಲಾ
ಶೀರ್ಷಾಸನ ಹಾಕಿ
ಆ ಮರದಂತೆ ನಾವೂ
ಭೂಮಿಯನ್ನು
ಹಿಡಿದಿಟ್ಟಿದ್ದೇವೆ
ಅನ್ನುತ್ತಾರೆ.

Friday, August 1, 2008

ಕತ್ತಲ ಮೇಲೆ

ಭುವಿಯು ರೆಪ್ಪೆ ಮುಚ್ಚಿದ ವೇಳೆ
ಬೆಳಕು ಬತ್ತಲಾಗಿ
ಕತ್ತಲಾಗಿದೆ ನೋಡು


ಬದುಕು ಬಳುಕುವ ವೇಳೆ
ಉಸಿರ ತುಡಿತಕ್ಕೊಂದು
ಪದವ ಹಿಡಿದು


ನಿನ್ನೆ-ನಾಳೆಗಳ ಜೊತೆಗೆ ಹೆಣೆದು
ಇಂದಿಗೊಂದಿಷ್ಟು ಇಂಬುಕೊಟ್ಟು
ವರ್ತಮಾನದ ಸಾಲು ಬರೆದು


ಗಡಿಯಾರದ ಮುಳ್ಳು ಕಿತ್ತು
ಸಮಯದಲದ್ದಿ, ಬದುಕಿಗೊಂದು
ಭಾಷ್ಯ ಬರೆದಿರಲು


ಮಬ್ಭುಗತ್ತಲ ಬಾಳ ಮೇಲೆ
ಬೆಳಕಿನಿಂದಲೇ ಒಂದು
ಕವಿತೆ ಮುಡಿತು ನೋಡು.

Wednesday, July 9, 2008

ಮತ್ತೆ ಮಳೆ ಹೊಯ್ಯುತಿದೆ..


ಮತ್ತೆ ಮಳೆ ಹೊಯ್ಯುತಿದೆ

ಕೈಗೆಟಕದ ಆಗಸದ ಅಂಚಲಿ

ಕಾಮನಬಿಲ್ಲು ಮುಡುತಿದೆ


ಕೆಸರ ಮೆತ್ತಿದ ಮಣ್ಣ ರಸ್ತೆ

ಹೆಜ್ಜೆ ಗುರುತ ಮರೆಸಿದೆ

ಮನದ ನೋವ ಕಲಸಿದೆ


ಕಣ್ಣಂಚಿನ ಕಟ್ಟೆ ಒಡೆಯೆ

ಕೆಲ ಹನಿಗಳು ಕಾದಿವೆ

ಮತ್ತೆ ಮಳೆ ಹೊಯ್ಯುತ್ತಿದೆ..


ಊರ ನದಿಯ ತಟದ ಬಂಡೆ

ಕಾಣದಂತೆ ಮುಳುಗಿದೆ

ನಿನ್ನ ನೆನಪ ಮರೆಸಿದೆ


ಮಳೆ ಹನಿಯ ತಂತುರು ನಾದಕೆ

ನೆನಪು ಎಕೋ ಕೆರಳಿದೆ

ಮತ್ತೆ ಹೂವು ಅರಳಿದೆ


ಎದೆಯೊಳಗಿನ ನೋವ ಮಡುವು

ದುಮ್ಮಿಕ್ಕಿ ಇಂದು ಹರಿದಿದೆ

ಮತ್ತೆ ಮಳೆ ಹೊಯ್ಯುತ್ತಿದೆ...

Wednesday, June 18, 2008

ಪೌರ್ಣಿಮೆ


ನಿನ್ನ ನಗುವಂತೆ

ಈ ಬೆಳದಿಂಗಳು

ಸಾಗರದ ಅಲೆಗಳಂತೆ

ನನ್ನ ಕವನಗಳು

ಪೌರ್ಣಿಮೆಯ ರಾತ್ರಿಯಲಿ

ನಿನ್ನ ನೆನಪಾಗಿರಲು

ಚಂದ್ರನನ್ನೇ ಮುತ್ತಿಕ್ಕುತ್ತವೆ

ಕಡಲ ಅಲೆಗಳು

ಗುಟ್ಟು

ಸೂರ್ಯಾಸ್ತದ ಹೊತ್ತು
ಇನಿಯನ ಮುತ್ತಿಗೆ
ಕೆಂಪಾಗಿತ್ತು ಮುಗಿಲು
ಮೋಡಗಳ ನಡುವೆ
ಮಿಂಚಿ ಮರೆಯಾದ ನೇಸರ,
ಇಣುಕಿದ್ದ ಶಶಿ
ನಮ್ಮ ಗುಟ್ಟು ರಟ್ಟಯಿತೀಗ
ನಕ್ಷತ್ರ ಲೊಕದಲೆಲ್ಲಾ
ನಮ್ಮ ಪ್ರೆಮದ್ದೇ ಚರ್ಚೆ.

Monday, May 19, 2008

ಪ್ರಯೋಗ

ತಿಳಿದಿರಲಿ ನಿಮಗೆ
ನಾವಿರುವುದು
ಪ್ರಯೋಗ ಶಾಲೆಯಲ್ಲಿ
ಇಲ್ಲಿ ದಯೆಗೆ ದಾರಿಯಿಲ್ಲ

ಆಗಷ್ಟೇ ಹುಟ್ಟಿ , ತೆವಳಿ
ಪ್ರಪಂಚ ನೋಡುವ
ತವಕದಿ ತಲೆಯೆತ್ತಿದಗೆಲ್ಲಾ
ಕತ್ತನ್ನೇ ಕೊಯ್ಯುತ್ತಾರೆ
ತುದಿಗೊಂದು ಬುಡಕೊಂದು
ಸೂಜಿ ಚುಚ್ಚಿ,ಎಳೆದಾಡಿ
ಅಲ್ಕೊಹಾಲ್,ಆಸಿಡ್ ಹಾಕಿ
ಬೇಕಾದ ಬಣ್ಣ ಹಚ್ಚಿ
ಭೂತ ಕನ್ನಡಿಯಲಿ
ಕಣ್ಣಿಕ್ಕಿ ನೋಡುತ್ತಾರೆ
ಹೊಸತ್ತೆನನ್ನೋ ಹುಡುಕುವಂತೆ.
ಗೊತ್ತಿತ್ತೇ ನಿಮಗೆ?
ನಿಮ್ಮೊಳಗೂ ಅಮೂಲ್ಯವಾದ್ದದೇನೋ
ಇದೆಯೆಂದು!

ಈ ಬುದ್ದಿಜೀವಿಗಳ ಕಣ್ಣುತಪ್ಪಿಸಿ
ಹಾಗೋ ಹೀಗೋ ಬದುಕಿ;ಬೆಳೆದು
ಹಾರಲು ಹೊರಟರೆ
ಹಿಡಿದೇ ಹಿಡಿಯುತ್ತಾರೆ.
ತುಂಡು ತುಂಡಾಗಿ ಕಡಿಯುತ್ತಾರೆ.
ನಿಮ್ಮೊಳಗಿಂದ ನಿಮ್ಮನ್ನೇ
ಕದಿಯುತ್ತಾರೆ.
ಇಷ್ಟೇಲ್ಲಾ ಆದರೂ
ನಿಮ್ಮ ಛಲ ನಿಮಗೆ
ಒಬ್ಬ ಸತ್ತರೆ, ಮತ್ತೊಬ್ಬ,
ಮಗದೊಬ್ಬ,ಹೀಗೆ...
ಅವಿರತ ಪ್ರಯತ್ನ


ಅರೆ! ಇನ್ನೂ ತಿಳಿಯಲಿಲ್ಲವೆ ನಿಮಗೆ
ಇದೊಂದು ಪ್ರಯೋಗಶಾಲೆ
ಇಲ್ಲಿ ದಯೆಗೆ ದಾರಿಯಿಲ್ಲ.

Thursday, May 1, 2008

ಕೆಲವು ಹನಿಗಳು

ಪುಸ್ತಕದ ಖಾಲಿ ಹಾಳೆಗಳ ನಡುವೆ
ಒಣಗಿದ ಗುಲಾಬಿ ಮೊಗ್ಗು
ಅರಳಿದೆ ಮನ


ಮಳೆಗಾಲದ ಸಂಜೆ
ಕಣ್ಣೀರಲ್ಲೂ
ಕಾಮನಬಿಲ್ಲು


ನೀಳ ಜಡೆಯ ಮೇಲೆ
ಕನಕಾಂಬರದ ಕಂಪು
ಕಾಣದ ಕೆನ್ನೆಯ ಮೇಲೆ
ಕಂಬನಿ ಇಳಿದಿದೆ



ರೊಮಾಂಚನದ ಸಂಜೆ
ಮಾತು ಮುರಿದ ಹುಡುಗಿ
ಕಣ್ಣಲ್ಲೇ ಮಾತಾಗುತ್ತಾಳೆ.



ಬೀಸಿದೆ ಗಾಳಿ
ಬೆಳಕ ಹಿಡಿದ ಕೈಗೆ
ಮುಗಿದ ತೈಲದ
ಅರಿವೇ ಇಲ್ಲ

Saturday, March 22, 2008

ಮತ್ತೊಂದು ಕವಿತೆ

ಈ ಕವಿತೆಯ ಸಹವಾಸವೇ ಸಾಕು

ಏನೋ ಹೇಳ ಹೋಗಿ

ಇನ್ನೇನೋ ಆಗುವ ಸಾಲುಗಳು

ನೇರ ವಾಕ್ಯವ ತಿರುಚಿ,ಕಿವುಚಿ

ಹೊಸತಾಗಿಸಿ ನೋಡುವ ಪರಿ

ಬೇಡವೇ ಬೇಡ ನನಗಿನ್ನು

ಬರೆದರೆ ಕಥೆಯೇ ಬರೆಯಬೇಕು

ಬದುಕ ಬವಣೆಯನು

ನೀಳವಾಗಿ ಸೆರೆ ಹಿಡಿಯಬೇಕು

ಕಾದಂಬರಿ ಬರೆಯುವಷ್ಟು

ಮಣ್ಣು,ಮಸಿ ನನ್ನ ಲೇಖನಿಯಲಿಲ್ಲ

ಸಣ್ಣ ಕಥೆಯೇ ಸರಿಯೆಂದು

ಪೆನ್ನು ಹಿಡಿದು ಕೂತೆ

ಮಾಸ್ತಿ,ಕಾಯ್ಕಿಣಿ,ಚಿತ್ತಾಲರಂತೆ

ನಾನೂ ಮಾಗಬೆಕೆಂದು

ಮೋಂಡು ಕುಳಿತೆ

ಮತ್ತದೇ ಕನಸು;

ಎನಂದಿನಂತೆ ತಡವಾಗಿ ಬಂದ

ಪ್ಯಾಸೆಂಜರ್ ಟ್ರೈನು,

ಕುಳಿ ಬಿದ್ದ ಕಪ್ಪು ರಸ್ತೆ

ಬಿರ್ರನೆ ತಿರುಗುವ

ಗಡಿಯಾರದ ಮುಳ್ಳು

ಆಸ್ಪತ್ರೆಯ ಘಾಟು

ಬೋಧೀ ವೃಕ್ಷದ ನೆರಳು

ಎಚ್ಚೆತ್ತು ನೋಡಲು

ಖಾಲಿ ಹಾಳೆಯ ಮೇಲೆ

ಮತ್ತೊಂದು ಕವಿತೆ!

Friday, March 7, 2008

ನೋವು



ಹುಣ್ಣಿಮೆಯ ಸ0ಜೆ

ಒಣಗಿದ ಮರದ

ರೆ0ಬೆಗಳು

ಪೂರ್ಣ ಚ0ದಿರನ ಮೇಲೂ

ಬರೆಗಳನ್ನೆಳೆದಿವೆ

Monday, March 3, 2008

ನಗು

ನಾನೇಕೆ ನಗಲಾರೆ ನಿನ್ನಂತೆ ಹೂವೇ
ನನಗೂ ಅರಳುವಾಸೆ
ನಿನ್ನಂತೆ ಚೆಲುವೆ


ನಾನೇಕೆ ನಗಲಾರೆ ನಿನ್ನಂತೆ ಹೂವೇ
ಸಮೃದ್ಧಿಯ ಗಿಡದಲಿ ಅರಳಿದ ಮೊಗ್ಗೇ
ನಿನ್ನ ನಗುವಿನ ಒಡಲಿನ
ಗುಟ್ಟನ್ನು ತಿಳಿಸೇ

ಹೇಗೆ ಅರಳಿದೆ ನೀನು ಮುಳ್ಳುಗಳ ನಡುವೆ
ಹೊಂಚು ಹಾಕಿವೆ ಕೈಗಳು
ಅಪಹರಿಸುವ ಬಯಕೆ

ಇನ್ನೂ ನಗುತಿಹೆಯಾ ನೀನು
ನನ್ನ ಕನಸಿನ ಹಾಗೆ...
ನಾನೇಕೆ ನಗಲಾರೆ ನಿನ್ನಂತೆ ಹೂವೇ

ಪರಿಕ್ರಮಣ


ಹುಡುಕಲೇನು


ಈ ಸಂಜೆಯಲಿ


ಸೂರ್ಯಾಸ್ತದಲಿ


ಅಡಗಿರುವ ವಸ್ತುವ


ಬದುಕಿನ ಸತ್ಯವ


ಉದಯ - ಅಸ್ತಮಾನ


ದೃಶ್ಯ ಒಂದೇ


ದಿಕ್ಕೊಂದೇ ಬೇರೆ


ಕಡಲ ಒಡಲ ಅಲೆಗಳಿಗೆ


ಹೊಂಬಣ್ಣ ಹಚ್ಚಿ


ಶರಧಿಯಲಿ ಮುಳುಗುತ್ತಾನೆ


ದಿನದ ಬೇಗೆ ಕಳೆಯಲು


ಮತ್ತೆ ಏಳುತ್ತಾನೆ


ಹೊಸ ಲವಲವಿಕೆ


ಮತ್ತದೇ ಉತ್ಸಾಹ


ಅದೇ ಹೊಂಬಣ್ಣದಲಿ


ಮಿಂದ ಹೊಸತೊಂದು ದಿನ


ವೇದಾಂತ, ಉಪನಿಷತ್ತುಗಳ


ಹಂಗಿಲ್ಲದೆ


ಆಧ್ಯಾತ್ಮದ ಅರಿವಿಲ್ಲದೇ


ಸಾರುತ್ತಿದೆ...


ಪರಿಕ್ರಮಣವೊಂದೇ


ಚಿರಂತನ ಸತ್ಯ

Saturday, February 23, 2008

ಮೌನ



ಹೇಗೆ ಬರೆಯಲಿ
ಮೌನದ ಮೆಲ್ ಓನ್ದು
ಕವಿತೆ?
ಶಬ್ದವೇ ಇಲ್ಲದ
ಕಾಲಿ ಹಳೆಯೇ
ಮೌನ.
ಹೇಗೆ ಹೆಣೆಯಲಿ
ಇಲ್ಲದ ಶಬ್ದಗಳ
ಹಾಡಾಗಿ ?!

Monday, February 18, 2008

ಮುಖಾ - ಮುಖಿ


ಮರದ ಚೌಕಟ್ಟೊಳಗೆ
ಮರೆಯದ ಚಿತ್ರ
ಬಣ್ಣ ಬಣ್ಣಗಳ ಚಿತ್ತಾರ
ಕಲಾವಿದನ ಕೈಚಳಕ

ಒಂದೊಂದು ಆಯಾಮದಲೂ
ಒಂದೊಂದು ರೂಪ
ಕೆಂಪು, ನೀಲಿ, ಹಸಿರು, ಬಿಳಿ
ವಿವಿಧ ಬಣ್ಣಗಳ ಲೋಕ

ಅಗೋ ಅಲ್ಲಿ ವ್ರದ್ಧನೊಬ್ಬ
ಕೆಕ್ಕರಿಸಿ ನೋಡುತಿಹ
ಇಲ್ಲ ಅಲ್ಲಿರುವುದು
ಎಳೆ ಹಸುಳೆಯ
ಮುಗ್ಧ ಮಂದಹಾಸ

ಕಲಾವಿದನಿಗೇ ಅಚ್ಚರಿ
ಅವನು ಮೂಡಿಸಿದ ಮುಖಗಳ ರೀತಿ
ಎಷ್ಟೊಂದು ಮುಖಗಳು
ಒಂದೇ ಫ್ರೇಮಿನೊಳಗೆ?!

ನಗು, ಅಳು, ದ್ವೇಷ,
ಅಸೂಯೆ, ಸ್ವಾರ್ಥ, ತ್ಯಾಗ
ಎಲ್ಲದಕ್ಕೂ ಒಂದೊಂದು ಮುಖ
ಈ ಮುಖವಾಡದ ಸಂತೆಯಲ್ಲಿ

ಎಲ್ಲರನೂ ಗೆದ್ದವನು
ತನ್ನಲ್ಲೇ ಸೋತವನು
ನಾಚಿ ಮರೆಯಾದವನು
ಭಾವನೆಗಳಿಗೊಂದೊಂದು ಮುಖ

ಧ್ಯಾನಿ, ಮೌನಿ, ಯೋಗಿ
ತ್ಯಾಗಿ, ಭೋಗಿ, ರೋಗಿ
ಎಲ್ಲರ ಮುಖಗಳು ಕಾಯುತ್ತಿವೆ ಇಲ್ಲಿ
ಕಳೆದುಹೋದ ನಿನ್ನೆಯ ನೆನಪಲ್ಲಿ
ನಾಳೆಯ ನಿರೀಕ್ಷೆಯಲ್ಲಿ

ಎಲ್ಲಾ ಭಾವನೆಗಳ ಬಂಧಿಸಿದ
ಗಾಜಿನ ಆವರಣದ ಮೇಲೆ
ನೋಡುಗನದೇ ಮುಖದ ಪ್ರತಿಫಲನ.