Saturday, August 16, 2008

ಊರ್ಧ್ವಮುಖಿ

ಭುವಿಯನ್ನೂ ಬಾನನ್ನೂ
ಬೆಸೆಯುವಂತೆ
ಬಯಲಲೊಂದು
ಒಂಟಿ ಮರ.

ಟಿಸಿಲೊಡೆದ ಒಣ ರೆಂಬೆಗಳು
ಮೋಡದೊಳಗೇ ಇಳಿದು
ನೀರ ಹೀರುತಿವೆಯೆನೋ
ಭೂಮಿ ಭರಡಾದರೆ
ಇನ್ನೇನು ಮಾಡೀತು ಪಾಪ! !

ನೆಲದೊಳಗಿನ ಬೇರು
ಗತಕಾಲವನ್ನೆಲ್ಲಾ
ತಡವಿ, ಎಡವಿ
ಒಳಗಿನ ಲವಾರಸಕ್ಕೆ
ಕರಟಿ ಹೋಗಿದೆ

ನೀರ ಅರಸುವ ಭರದಲ್ಲಿ,
ಮಣ್ಣ ಹೆಂಟೆಯ ಒಳಗಿನ
ಬೆಂಕಿಯ ಭಯದಲ್ಲಿ,
ಬೇರ ಮರೆತೇ ಬಿಟ್ಟಿದೆ.

ಜನರೂ ಅಷ್ಟೇ
ಅದ ಕಂಡಾಗೆಲ್ಲಾ
ಶೀರ್ಷಾಸನ ಹಾಕಿ
ಆ ಮರದಂತೆ ನಾವೂ
ಭೂಮಿಯನ್ನು
ಹಿಡಿದಿಟ್ಟಿದ್ದೇವೆ
ಅನ್ನುತ್ತಾರೆ.

Friday, August 1, 2008

ಕತ್ತಲ ಮೇಲೆ

ಭುವಿಯು ರೆಪ್ಪೆ ಮುಚ್ಚಿದ ವೇಳೆ
ಬೆಳಕು ಬತ್ತಲಾಗಿ
ಕತ್ತಲಾಗಿದೆ ನೋಡು


ಬದುಕು ಬಳುಕುವ ವೇಳೆ
ಉಸಿರ ತುಡಿತಕ್ಕೊಂದು
ಪದವ ಹಿಡಿದು


ನಿನ್ನೆ-ನಾಳೆಗಳ ಜೊತೆಗೆ ಹೆಣೆದು
ಇಂದಿಗೊಂದಿಷ್ಟು ಇಂಬುಕೊಟ್ಟು
ವರ್ತಮಾನದ ಸಾಲು ಬರೆದು


ಗಡಿಯಾರದ ಮುಳ್ಳು ಕಿತ್ತು
ಸಮಯದಲದ್ದಿ, ಬದುಕಿಗೊಂದು
ಭಾಷ್ಯ ಬರೆದಿರಲು


ಮಬ್ಭುಗತ್ತಲ ಬಾಳ ಮೇಲೆ
ಬೆಳಕಿನಿಂದಲೇ ಒಂದು
ಕವಿತೆ ಮುಡಿತು ನೋಡು.